ಹರ್ಯಂಕ ರಾಜವಂಶ ಭಾರತದ ಒಂದು ಪ್ರಾಚೀನ ರಾಜ್ಯವಾದ ಮಗಧವನ್ನು ಆಳಿದ ಎರಡನೇ ರಾಜವಂಶವಾಗಿತ್ತು. ಇದು ಬಾರ್ಹದ್ರಥ ರಾಜವಂಶದ ನಂತರ ಅಧಿಕಾರಕ್ಕೆ ಬಂದಿತು. ಈ ರಾಜವಂಶದ ಆಳ್ವಿಕೆ ಪ್ರಾಯಶಃ ಕ್ರಿ.ಪೂ. ೬ನೇ ಶತಮಾನದ ಮಧ್ಯದಲ್ಲಿ ಆರಂಭವಾಯಿತು. ಆರಂಭದಲ್ಲಿ, ರಾಜಗೃಹ ಇದರ ರಾಜಧಾನಿಯಾಗಿತ್ತು. ನಂತರ, ಇದನ್ನು ಆಧುನಿಕ ಪಾಟ್ನಾದ ಹತ್ತಿರದ ಪಾಟಲಿಪುತ್ರಕ್ಕೆ ಸ್ಥಳಾಂತರಿಸಲಾಯಿತು. ಈ ರಾಜವಂಶದ ಸಂಸ್ಥಾಪಕ ಸ್ವತಃ ಬಿಂಬಿಸಾರನೆ ಅಥವಾ ಅವನ ತಂದೆ ಭಟ್ಟೀಯ. ಬೌದ್ಧ ಪಠ್ಯ ಮಹಾವಂಶದ ಪ್ರಕಾರ, ಬಿಂಬಿಸಾರನ ತಂದೆ ಬಿಂಬಿಸಾರನಿಗೆ ಹದಿನೈದು ವರ್ಷ ವಯಸ್ಸಿಗೆ ರಾಜ್ಯಾಭಿಷೇಕ ಮಾಡಿದನು. ಇಬ್ಬರು ವಿದ್ವಾಂಸರ ಪ್ರಕಾರ, ಬಿಂಬಿಸಾರನ ತಂದೆಯ ಹೆಸರು ಭಟೀಯ ಅಥವಾ ಭಟ್ಟೀಯ ಎಂದಾಗಿತ್ತು, ಆದರೆ ಪುರಾಣಗಳು ಅವನನ್ನು ಹೇಮಜಿತ್, ಕ್ಷೇಮಜಿತ್, ಕ್ಷೇತ್ರೋಜ ಅಥವಾ ಕ್ಷೇತ್ರೌಜ ಎಂದು ಉಲ್ಲೇಖಿಸುತ್ತವೆ ಮತ್ತು ಟಿಬೇಟನ್ ಪಠ್ಯಗಳು ಅವನನ್ನು ಮಹಾಪದ್ಮನೆಂದು ಹೆಸರಿಸುತ್ತವೆ. ಈ ರಾಜವಂಶದ ನಂತರ ಶಿಶುನಾಗ ರಾಜವಂಶ ಅಧಿಕಾರಕ್ಕೆ ಬಂದಿತು. == ಬಿಂಬಿಸಾರ == ಹರ್ಯಂಕ ರಾಜ ಬಿಂಬಿಸಾರನು ವೈವಾಹಿಕ ಸಂಬಂಧಗಳು ಮತ್ತು ದಾಳಿಗಳ ಮೂಲಕ ತನ್ನ ರಾಜ್ಯದ ಗಡಿಗಳನ್ನು ವಿಸ್ತರಿಸಲು ಜವಾಬ್ದಾರನಾಗಿದ್ದನು. ಈ ರೀತಿಯಲ್ಲಿ ಕೋಸಲ ನಾಡು ಮಗಧಕ್ಕೆ ಪತನಹೊಂದಿತು. ಜೈನ ಧರ್ಮಗ್ರಂಥಗಳಲ್ಲಿ ಇವನನ್ನು ರಾಹ ಶ್ರೇಣಿಕನೆಂದು ಉಲ್ಲೇಖಿಸಲಾಗಿದೆ. ಈ ಆರಂಭಿಕ ರಾಜವಂಶದಿಂದ ಆಳಲ್ಪಟ್ಟ ಪ್ರಾಂತ್ಯ ವ್ಯಾಸದಲ್ಲಿ ೩೦೦ ಲೀಗ್‍ಗಳೆಂದು, ಮತ್ತು ೮೦,೦೦೦ ಸಣ್ಣ ವಸಾಹತುಗಳನ್ನು ಒಳಗೊಂಡಿತ್ತೆಂದು ಅಂದಾಜುಗಳು ಹೇಳುತ್ತವೆ. == ಅಜಾತಶತ್ರು == ಕೆಲವು ಮೂಲಗಳಲ್ಲಿ, ಬಿಂಬಿಸಾರನನ್ನು ಅವನ ಮಗ ಅಜಾತಶತ್ರುವು ಸೆರೆಯಲ್ಲಿಟ್ಟು ಕೊಂದನು. ಅದಕ್ಕಾಗಿ ಅಜಾತಶತ್ರುವಿಗೆ ಪಿತೃಘಾತಕ ಎಂಬ ಬಿರುದು ಬಂತು ಅಜಾತಶತ್ರುವಿನ ಆಳ್ವಿಕೆಯಲ್ಲಿ ಈ ರಾಜವಂಶವು ತನ್ನ ಅತಿದೊಡ್ಡ ವಿಸ್ತಾರವನ್ನು ಮುಟ್ಟಿತು. ಅಜಾತಶತ್ರುವು ಮಹಾವೀರ (ಕ್ರಿ.ಪೂ. 599–527) ಮತ್ತು ಗೌತಮ ಬುದ್ಧರಿಗೆ (ಕ್ರಿ.ಪೂ. 563–483) ಸಮಕಾಲೀನನಾಗಿದ್ದನು. ಅಜಾತಶತ್ರು ಮತ್ತು ಗೌತಮ ಬುದ್ಧರ ಭೇಟಿಯ ಬಗ್ಗೆ ಬಾಹಾವತ್ ಶಾಸನವು ತಿಳಿಸುತ್ತದೆ. ಅಜಾತಶತ್ರುವು ಲಿಚ್ಛವಿಯರಿಂದ ಆಳಲ್ಪಟ್ಟ ವಜ್ಜಿಯ ವಿರುದ್ಧ ಒಂದು ಯುದ್ಧದಲ್ಲಿ ಪಾಲ್ಗೊಂಡಿದ್ದನು ಮತ್ತು ವೈಶಾಲಿ ಗಣರಾಜ್ಯವನ್ನು ಗೆದ್ದುಕೊಂಡನು. ಅಜಾತಶತ್ರುವು ವಶಪಡಿಸಿಕೊಳ್ಳುವಿಕೆ ಮತ್ತು ವಿಸ್ತಾರದ ನೀತಿಗಳನ್ನು ಅನುಸರಿಸಿದನು. ಇವನು ಕೋಸಲದ ರಾಜನನ್ನು ಒಳಗೊಂಡಂತೆ ತನ್ನ ನೆರೆರಾಜ್ಯಗಳನ್ನು ಪರಾಭವಗೊಳಿಸಿದನು; ಇವನೊಂದಿಗೆ ಭಿನ್ನಾಭಿಪ್ರಾಯ ಹೊಂದಿದಾಗ ಇವನ ಸೋದರರು ಕಾಶಿಗೆ ಹೋದರು. ಕಾಶಿಯನ್ನು ಬಿಂಬಿಸಾರನಿಗೆ ವರದಕ್ಷಿಣೆಯಾಗಿ ಕೊಡಲಾಗಿತ್ತು. ಅಜಾತಶತ್ರುವು ಕಾಶಿಯನ್ನು ಆಕ್ರಮಿಸಿ ಚಿಕ್ಕದಾದ ರಾಜ್ಯಗಳನ್ನು ವಶಪಡಿಸಿಕೊಂಡನು. ಅಜಾತಶತ್ರುವಿನ ಕೆಳಗೆ ಮಗಧವು ಉತ್ತರ ಭಾರತದಲ್ಲಿನ ಅತ್ಯಂತ ಬಲಿಷ್ಠ ರಾಜ್ಯವಾಯಿತು. == ಉದಾಯಿನ್ == ಅಂತಿಮವಾಗಿ, ಉದಯಭದ್ರನು ತನ್ನ ತಂದೆ ಅಜಾತಶತ್ರುವಿನ ಉತ್ತರಾಧಿಕಾರಿಯಾದನು ಎಂದು ಮಹಾವಂಶ ಹೇಳುತ್ತದೆ. ಇವನು ರಾಜಧಾನಿಯನ್ನು ಪಾಟಲಿಪುತ್ರಕ್ಕೆ ಸ್ಥಳಾಂತರಿಸಿದನು. ನಂತರದ ಮೌರ್ಯ ಸಾಮ್ರಾಜ್ಯದ ಅಡಿಯಲ್ಲಿ ಪಾಟಲಿಪುತ್ರ ವಿಶ್ವದ ಅತ್ಯಂತ ದೊಡ್ಡ ನಗರವಾಯಿತು. ಉದಯಭದ್ರನು ಹದಿನಾರು ವರ್ಷ ಆಳಿದನೆಂದು ನಂಬಲಾಗಿದೆ. == ನಂತರದ ಅರಸರು == ಈ ರಾಜ್ಯವು ಅತ್ಯಂತ ರಕ್ತಸಿಕ್ತ ಉತ್ತರಾಧಿಕಾರವನ್ನು ಹೊಂದಿತ್ತು. ಅನುರುದ್ಧನು ಉದಯಭದ್ರನನ್ನು ಕೊಲೆಮಾಡಿ ಅಂತಿಮವಾಗಿ ಉತ್ತರಾಧಿಕಾರಿಯಾದನು, ಮತ್ತು ಅವನ ಮಗ ಮುಂಡನು ಅದೇ ರೀತಿಯಲ್ಲಿ ತನ್ನ ತಂದೆಯ ನಂತರ ಉತ್ತರಾಧಿಕಾರಿಯಾದನು, ಅದೇ ರೀತಿ ಅವನ ಮಗ ನಾಗದಾಸಕನು. ಭಾಗಶಃ ಈ ರಕ್ತಸಿಕ್ತ ವಂಶದ್ವೇಷದ ಕಾರಣದಿಂದ, ಒಂದು ನಾಗರಿಕ ದಂಗೆಯು ಶಿಶುನಾಗ ರಾಜವಂಶದ ಉದಯಕ್ಕೆ ಕಾರಣವಾಯಿತು ಎಂದು ನಂಬಲಾಗಿದೆ. == ಉಲ್ಲೇಖಗಳು ==